ನವದೆಹಲಿ: ಅಮೆರಿಕಾ, ಚೀನಾ, ಬ್ರೆಜಿಲ್ ಮತ್ತು ದಕ್ಷಿಣ ಕೊರಿಯಾದಲ್ಲಿ ಮಹಾಮಾರಿ ಕೊರೋನಾ ಉಲ್ಬಣಗೊಂಡಿದ್ದು, ಈ ಬೆಳವಣಿಗೆಯು ಭಾರತದಲ್ಲೂ ಆತಂಕವನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಪರಿಶೀಲಿಸಲು ಆರೋಗ್ಯ ಸಚಿವಾಲಯವು ಬುಧವಾರ ಸಭೆ ನಡೆಸುತ್ತಿದೆ.
ನಿನ್ನೆಯಷ್ಟೇ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ಸಕಾರಾತ್ಮಕ ಮಾದರಿಗಳ ಜೀನೋಮ್ ಅನುಕ್ರಮ ಪ್ರಕ್ರಿಯೆಯನ್ನು ಬಲಪಡಿಸಲು ಮತ್ತು ಹೊಸ ರೂಪಾಂತರಗಳ ಬಗ್ಗೆ ನಿಗಾ ಇಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಗಳನ್ನು ನೀಡಿದ್ದರು.
ಅದಾಗ್ಯೂ ಅಂತರಾಷ್ಟ್ರೀಯ ಪರಿಸ್ಥಿತಿಗಳನ್ನು ಚರ್ಚಿಸಲು ಮನ್ಸುಖ್ ಮಾಂಡವಿಯಾ ಅವರು, ಬುಧವಾರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಇಂತಹ ಕ್ರಮಗಳು ದೇಶದಲ್ಲಿ ಪತ್ತೆಯಾಗುವ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ನಿಯಂತ್ರಿಸಲು ಮತ್ತು ಅಗತ್ಯ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಷನ್ ಮತ್ತು ಕೋವಿಡ್-ಸೂಕ್ತ ನಡವಳಿಕೆ ಕಾರ್ಯತಂತ್ರದ ಮೇಲೆ ಭಾರತ ತನ್ನ ಗಮನವನ್ನು ಕೇಂದ್ರೀಕರಿಸಿದ್ದು, ಕೊರೋನಾ ವೈರಸ್ ಹರಡುವಿಕೆಯನ್ನು ನಿರ್ಬಂಧಿಸಲು ಸಮರ್ಥವಾಗಿದೆ. ದೇಶದಲ್ಲಿ ಪ್ರಸ್ತುತ 1,200 ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್ ನ ಸಾರ್ವಜನಿಕ ಆರೋಗ್ಯ ಸವಾಲು ಪ್ರಪಂಚದಾದ್ಯಂತ ಇನ್ನೂ ಮುಂದುವರೆದಿದೆ ಮತ್ತು ವಾರಕ್ಕೆ ಸುಮಾರು 35 ಲಕ್ಷ ಪ್ರಕರಣಗಳು ವರದಿಯಾಗುತ್ತವೆ ಎಂದು ತಿಳಿಸಿದ್ದಾರೆ.
Advertisement