ಬೆಂಗಳೂರು: ಕಳೆದ 10 ದಿನಗಳಲ್ಲಿ ಡೀಸೆಲ್ ದರದಲ್ಲಿ ನಿರಂತರ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಟಿಕೆಟ್ ದರ ಕೂಡ ಹೆಚ್ಚಳವಾಗುವ ಸಾಧ್ಯತೆಗಳು ಹೆಚ್ಚಿವೆ.
ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಇಂಧನ ದರ ಏರಿಕೆ ಮತ್ತಷ್ಟು ಸಂಕಷ್ಟವಾಗಿ ಪರಿಣಮಿಸಿದ್ದು, ಈ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಾರಿಗೆ ನಿಗಮಗಳ ಅಧಿಕಾರಿಗಳು ಮಾತನಾಡಿ, ಡೀಸೆಲ್ ದರ ಏರಿಕೆಯಿಂದ ಕಾರ್ಯಾಚರಣಾ ವೆಚ್ಚದಲ್ಲಿ ಗಣನೀಯ ಹೆಚ್ಚಳವಾಗಿದ್ದು, ಈಗಿನ ಪರಿಸ್ಥಿತಿಯಲ್ಲಿ ಪ್ರಯಾಣ ದರ ಹೆಚ್ಚಳದ ಪ್ರಸ್ತಾಪವೇ ಏಕೈಕ ಆಯ್ಕೆಯಾಗಿ ಕಾಣಿಸುತ್ತಿದೆ. ಈಗಾಗಲೇ ಆರ್ಥಿಕ ಒತ್ತಡದಲ್ಲಿರುವ ನಿಗಮಗಳಿಗೆ ಇಂಧನ ದರ ಏರಿಕೆ ಮತ್ತಷ್ಟು ಹೊರೆ ತಂದಿದ್ದು, ಇದರಿಂದ ಟಿಕೆಟ್ ದರ ಪರಿಷ್ಕರಣೆ ಕುರಿತ ಚರ್ಚೆಗಳು ಆರಂಭವಾಗಿವೆ ಎಂದು ಹೇಳಿದ್ದಾರೆ
ಈ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು, ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ಅಂತಿಮ ನಿರ್ಧಾರವು ನಾಲ್ಕು ಸಾರಿಗೆ ನಿಗಮಗಳು ಸಲ್ಲಿಸುವ ಪ್ರಸ್ತಾವನೆಗಳ ಆಧಾರದ ಮೇಲೆ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಇದೂವರೆಗೆ ಯಾವುದೇ ನಿಗಮವೂ ಅಧಿಕೃತವಾಗಿ ದರ ಹೆಚ್ಚಳಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ನಿಗಮಗಳು ಆರ್ಥಿಕ ಒತ್ತಡ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ಉಲ್ಲೇಖಿಸಿ ಪ್ರಯಾಣ ದರ ಪರಿಷ್ಕರಣೆ ಕೋರಿ ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರ ಆ ಬಗ್ಗೆ ಪರಿಶೀಲನೆ ನಡೆಸಲಿದೆ. ನಾಲ್ಕೂ ನಿಗಮಗಳಿಂದ ಪ್ರಸ್ತಾವನೆ ಬಂದ ನಂತರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಡೀಸೆಲ್ ದರ ಏರಿಕೆಯಿಂದ ಸಾರಿಗೆ ನಿಗಮಗಳ ಮೇಲಿನ ಆರ್ಥಿಕ ಹೊರೆ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ರಾಮಲಿಂಗಾರೆಡ್ಡಿ, ಸೋಮವಾರದ ಹೆಚ್ಚಳಕ್ಕೂ ಮುನ್ನವೇ ಡೀಸೆಲ್ ದರದಲ್ಲಿ ಸುಮಾರು ರೂ.4 ಏರಿಕೆಯಾಗಿದ್ದರಿಂದ ನಾಲ್ಕು ನಿಗಮಗಳಿಗೆ ತಿಂಗಳಿಗೆ ಸುಮಾರು ರೂ.25 ಕೋಟಿ ಹಾಗೂ ವಾರ್ಷಿಕವಾಗಿ ರೂ.300 ಕೋಟಿಗೂ ಹೆಚ್ಚು ಹೆಚ್ಚುವರಿ ವೆಚ್ಚ ಉಂಟಾಗುವ ಅಂದಾಜು ಇತ್ತು.
ಇದೀಗ ಹೆಚ್ಚುವರಿ ಸೆಸ್ ಹಾಗೂ ದರ ಪರಿಷ್ಕರಣೆಗಳಿಂದ ಡೀಸೆಲ್ ದರವು ಲೀಟರ್ಗೆ ರೂ.7ಕ್ಕೂ ಹೆಚ್ಚು ಏರಿಕೆಯಾಗಿರುವುದರಿಂದ ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಆದಾಗ್ಯೂ, ಈವರೆಗೆ ಸರ್ಕಾರಕ್ಕೆ ಯಾವುದೇ ಅಧಿಕೃತ ಪ್ರಸ್ತಾವನೆ ಬಂದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಸಾರಿಗೆ ನಿಗಮಗಳು ದರ ಹೆಚ್ಚಳಕ್ಕೆ ಸಂಬಂಧಿಸಿದ ಮನವಿಯನ್ನು ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ಗಮನಾರ್ಹವಾಗಿ, ಕಳೆದ ಬಾರಿ 2025ರ ಜನವರಿಯಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ KSRTC, KKRTC, NWKRTC ಹಾಗೂ BMTC ಬಸ್ ದರಗಳನ್ನು ಶೇ.15ರಷ್ಟು ಹೆಚ್ಚಿಸಲಾಗಿತ್ತು. ಆಗಲೂ ಕಾರ್ಯಾಚರಣಾ ವೆಚ್ಚ ಮತ್ತು ಇಂಧನ ದರ ಏರಿಕೆಯನ್ನು ಕಾರಣವಾಗಿ ಉಲ್ಲೇಖಿಸಲಾಗುತ್ತಿದೆ.
ಡೀಸೆಲ್ ದರ ಏರಿಕೆಯ ಪರಿಣಾಮವಾಗಿ ಮತ್ತೊಮ್ಮೆ ಬಸ್ ಪ್ರಯಾಣ ದರ ಹೆಚ್ಚಳವಾದರೆ, ದಿನನಿತ್ಯ ಸರ್ಕಾರಿ ಬಸ್ಗಳನ್ನು ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಇದರಿಂದ ಪ್ರಯಾಣಿಕರಲ್ಲಿ ಆತಂಕವೂ ಹೆಚ್ಚಾಗಿದೆ.