ಕಿಚ್ಚ ಸುದೀಪ್ ಜೊತೆ ಒಂದು ಸಿನಿಮಾ ಮಾಡಿದರೆ 10 ಸಿನಿಮಾ ಮಾಡಿದಂತೆ: ಕೋಟಿಗೊಬ್ಬ 3 ನಿರ್ದೇಶಕ ಶಿವ ಕಾರ್ತಿಕ್

ಮೊದಲ ಮ್ಯಾಚಿನ ಮೊದಲ ಬಾಲ್ ನಲ್ಲೇ ಸಿಕ್ಸರ್ ಹೊಡೆಯುವ ಅದೃಷ್ಟ ಎಲ್ಲರಿಗೂ ಒಲಿಯುವುದಿಲ್ಲ. ಆ ಅದೃಷ್ಟವಂತ ಸದ್ಯ ಸ್ಯಾಂಡಲ್ ವುಡ್ ನಲ್ಲಿದ್ದರೆ ಅದು ಕೋಟಿಗೊಬ್ಬ 3 ನಿರ್ದೇಶಕ ಶಿವ ಕಾರ್ತಿಕ್. ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು ಸುದೀಪ್ ಹೆಗ್ಗಳಿಕೆ, ಅವರಿಗೆ ಸಿನಿಮಾ ಬಗ್ಗೆ ಇರುವ ಜ್ಞಾನ, ತಿಳಿವಳಿಕೆ ಅಪಾರ ಎನ್ನುತ್ತಾರೆ ಶಿವ ಕಾರ್ತಿಕ್.
ಕಿಚ್ಚ ಸುದೀಪ್ ಜೊತೆ ಒಂದು ಸಿನಿಮಾ ಮಾಡಿದರೆ 10 ಸಿನಿಮಾ ಮಾಡಿದಂತೆ: ಕೋಟಿಗೊಬ್ಬ 3 ನಿರ್ದೇಶಕ ಶಿವ ಕಾರ್ತಿಕ್
Updated on

ಬೆಂಗಳೂರು: ಮೊದಲ ಮ್ಯಾಚಿನ ಮೊದಲ ಬಾಲ್ ನಲ್ಲೇ ಸಿಕ್ಸರ್ ಹೊಡೆಯುವ ಅದೃಷ್ಟ ಎಲ್ಲರಿಗೂ ಒಲಿಯುವುದಿಲ್ಲ. ಆ ಅದೃಷ್ಟವಂತ ಯುವಕ ಸದ್ಯ ಸ್ಯಾಂಡಲ್ ವುಡ್ ನಲ್ಲಿದ್ದರೆ ಅದು ಕೋಟಿಗೊಬ್ಬ3 ನಿರ್ದೇಶಕ ಶಿವ ಕಾರ್ತಿಕ್. 

ಸಿನಿಮಾ ನಿರ್ದೇಶನ ಮಾಡಲು ಒಂದೇ ಒಂದು ಅವಕಾಶ ಸಿಕ್ಕರೆ ಸಾಕು ಅಂತ ಎಲ್ಲರೂ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ. ಅದರೆ ಶಿವ ಕಾರ್ತಿಕ್ ಅದೃಷ್ಟ ನೋಡಿ. ಕೋಟಿಗೊಬ್ಬ3 ಮೂಲಕ ಮೊದಲ ಸಿನಿಮಾದಲ್ಲೇ ನಟ ಸುದೀಪ್ ಅವರನ್ನು ನಿರ್ದೇಶಿಸುವ ಅವಕಾಶವನ್ನು ದಕ್ಕಿಸಿಕೊಂಡಿದ್ದಾರೆ. 

ಈ ಹಿಂದೆ ಯಾವುದೇ ಅನುಭವ ಇಲ್ಲದಿದ್ದರೂ ತಮ್ಮ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿದ್ದಕ್ಕಾಗಿ ಶಿವ ಕಾರ್ತಿಕ್ ನಿರ್ಮಾಪಕ ಸೂರಪ್ಪ ಬಾಬು ಮತ್ತು ಸುದೀಪ್ ಅವರಿಗೆ ಧನ್ಯವಾದ ಅರ್ಪಿಸುತ್ತಾರೆ. 

ಕಳೆದ ಮೂರು ವರ್ಷಗಳಿಂದ ಕೋಟಿಗೊಬ್ಬ 3 ಬಿಡುಗಡೆಯ ಬಗ್ಗೆ ಚರ್ಚೆ ಆಗುತಾಲೇ ಇತ್ತು. ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಬಿಡುಗಡೆ ವಿಳಂಬವಾಗುತ್ತಲೇ ಬಂದಿತ್ತು. ಕಡೆಗೂ ಅಕ್ಟೋಬರ್ ೧೪ ರಂದು ಆಯುಧ ಪೂಜೆ ದಿನದಂದೇ ಸಿನಿಮಾ ಬಿಡುಗಡೆಯಾಗುತ್ತಿದೆ. 

ಸುದೀಪ್ ಅವರನ್ನು ನಿರ್ದೇಶಿಸಿದ್ದೇ ಜೀವನದ ಮರೆಯಲಾಗದ ಕ್ಷಣ. ಸುದೀಪ್ ಅವರಿಗೆ ಸಿನಿಮಾ ಬಗ್ಗೆ ಇರುವ ಜ್ನಾನ, ತಿಳಿವಳಿಕೆ ಅಪಾರ ಎನ್ನುತ್ತಾರೆ ಶಿವ ಕಾರ್ತಿಕ್. 26 ವರ್ಷಗಳ ಅವರ ಅನುಭವವನ್ನು ಒರೆಗೆ ಹಚ್ಚುವುದೇ ಅವರನ್ನು ಇಂದಿಗೂ ಸಿನಿಮಾರಂಗದಲ್ಲಿ ಪ್ರಸ್ತುತರನ್ನಾಗಿಸಿರುವುದು ಎಂದು ಶಿವ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು ಸುದೀಪ್ ಹೆಗ್ಗಳಿಕೆ ಎಂದು ಶಿವ ಕಾರ್ತಿಕ್ ಮೆಚ್ಚುಗೆ ಸೂಚಿಸುತ್ತಾರೆ. ಅವರೊಂದಿಗೆ ಒಂದು ಸಿನಿಮಾ ಮಾಡುವುದೆಂದರೆ 10 ಸಿನಿಮಾಗಳಿಗೆ ಕೆಲಸ ಮಾಡಿದಂತೆ ಎನ್ನುವುದು ಅವರ ಮನದ ಮಾತು.

ಕೋಟಿಗೊಬ್ಬ 2 ನಲ್ಲಿ ಸುದೀಪ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸತ್ಯ ಮತ್ತು ಶಿವ ಎನ್ನುವ ಎರಡು ಪಾತ್ರಗಳಲ್ಲಿ ಅವರು ನಟಿಸಿದ್ದರು. ಆದರೆ ಕೋಟಿಗೊಬ್ಬ 3 ಸಿನಿಮಾದಲ್ಲಿ ಸುದೀಪ್ 3 ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪಾತ್ರ ಯಾವುದು ಎನ್ನುವ ಕುತೂಹಲವನ್ನು ಸಿನಿಮಾ ನೋಡಿ ಪ್ರೇಕ್ಷಕರು ತಣಿಸಿಕೊಳ್ಳತಕ್ಕದ್ದು.

ಕೋಟಿಗೊಬ್ಬ 3ರಲ್ಲಿ ಮಡೋನಾ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸಾನಿ, ರವಿಶಂಕರ್ ಮೊದಲಾದವರು ನಟಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡಿದ್ದು, ಶೇಖರ್ ಚಂದ್ರು ಸಿನಿಮೆಟೊಗ್ರಾಫರ್ ಹೊಣೆ ಹೊತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com